ಕೌಂಡ, ಕೆನೆತ್
1924-eóÁಂಬಿಯದ ಅಧ್ಯಕ್ಷ. ಮಾನವತಾವಾದಿ. ಅಹಿಂಸಾತತ್ತ್ವಪ್ರತಿಪಾದಕ. ಭಾರತದ ಅತ್ಯುಚ್ಛ ಪ್ರಶಸ್ತಿಗಳಲೊಂದಾದ ನೆಹರೂ ಶಾಂತಿ ಪ್ರಶಸ್ತಿ (1970) ವಿಜೇತ. ಭಾರತಕ್ಕೂ ಭೇಟಿ ನೀಡಿದ್ದ ಈ ವ್ಯಕ್ತಿ ಮಹಾತ್ಮಗಾಂಧಿಯವರಿಂದ ಪ್ರಭಾವಿತನಾದುದಾಗಿ ಹೇಳಿಕೊಂಡಿದ್ದಾನೆ. ಪರತಂತ್ರವಾಗಿದ್ದ eóÁಂಬಿಯಕ್ಕೆ ಅಹಿಂಸಾತ್ಮಕ ವಿಧಾನದ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಳ್ಳಲು ಶ್ರಮಿಸಿ ಸಫಲನಾದ ಈತ eóÁಂಬಿಯದಲ್ಲಿ ಮಾತ್ರವಲ್ಲದೆ ಇಡೀ ಆಫ್ರಿಕದಲ್ಲಿ ಜನಪ್ರಿಯತೆ ಗಳಿಸಿರುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬ.

	ಕೌಂಡ ಜನಿಸಿದ್ದು 1924ರ ಏಪ್ರಿಲ್ 28ರಂದು. ತಂದೆ ಡೇವಿಡ್ ಕೌಂಡ, ತಾಯಿ ಹೆಲೆನ್. ತಂದೆ, ತಾಯಿ ಇಬ್ಬರೂ ನಿಯಾಸಲ್ಯಾಂಡಿನಲ್ಲಿ ಹುಟ್ಟಿದವರು. ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಚರ್ಚ್ ಆಫ್ ಸ್ಕಾಟ್ಲೆಂಡಿನಿಂದ ನಿಯೋಜಿತರಾಗಿ eóÁಂಬಿಯ (ಆಗಿನ ಉತ್ತರ ರೊಡೀಷಿಯ) ಮತ್ತು ಟಾಂಗನ್ಯೀಕಗಳ ನಡುವಿನ ಗಡಿಯ ಬಳಿ ಇರುವ ಚಿನ್ಸಾಲಿಗೆ ಬಂದಿದ್ದರು. ಕೌಂಡ ತನ್ನ ತಂದೆತಾಯಿಯರ ಇಳಿವಯಸ್ಸಿನಲ್ಲಿ, ಅವರ ಎಂಟನೆಯ ಮಗುವಾಗಿ ಹುಟ್ಟಿದ. ಈತನ ಜನನವನ್ನು ಅವರು ನಿರೀಕ್ಷಿಸಿರಲಿಲ್ಲವಾದ್ದರಿಂದ ಅವರು ಮಗುವಿಗೆ ಬುಚಿಜû್ಯ (ಅನಿರೀಕ್ಷಿತ) ಎಂದು ಹೆಸರಿಟ್ಟರು. ತನ್ನ ಕಿರಿಯ ಮಗನೂ ತನ್ನಂತೆಯೇ ಧರ್ಮಪ್ರಚಾರಕನಾಗಬೇಕೆಂಬುದು ತಂದೆಯ ಆಸೆಯಾಗಿತ್ತು. ಕೆನೆತ್‍ಗೆ 8 ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡ. ಕೆನೆತನ ತಾಯಿ ತನ್ನ ನೆರೆಯವರೊಬ್ಬರಿಂದ ಸಾಲ ಪಡೆದು ತನ್ನ ಮಗನನ್ನು ಶಾಲೆಗೆ ಸೇರಿಸಿದಳು. ಶಿಕ್ಷಣಶುಲ್ಕದ ಹಣವನ್ನು ಸಂಪಾದಿಸುವುದಕ್ಕಾಗಿ ಈ ಹುಡುಗ ಅಡುಗೆಮನೆಯ ಕೆಲಸಮಾಡುತ್ತಿದ್ದ. ಎರಡನೆಯ ಮಹಾಯುದ್ಧ ಆರಂಭವಾದಾಗ ಕೆನೆತ್ ಕೌಂಡ ಲುಬ್ವದಲ್ಲಿ ಅಧ್ಯಾಪಕ ಶಿಕ್ಷಣ ಪಡೆಯುತ್ತಿದ್ದ. ಅದನ್ನು ಮುಗಿಸಿದ ಕೂಡಲೆ ಮುನಾಲಿಯಲ್ಲಿ ಹೊಸದಾಗಿ ಆರಂಭವಾದ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದ. ಕೌಂಡ ಅಲ್ಲಿದ್ದಾಗ ಈತನ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಡೇನಿಯೆಲ್ ಸೋಂಕ್ವಿಷ್. ಆ ವೇಳೆಗೆ ತೀವ್ರವಾಗಿದ್ದ ವರ್ಣವಿದ್ವೇಷ ಮತ್ತು ಜನಾಂಗ ಪ್ರತ್ಯೇಕತೆಯ ಭೀಕರ ಚಿತ್ರವನ್ನು ಆತ ಕೌಂಡನಿಗೆ ವಿವರಿಸಿದ. ಆದರೆ ಆಗ ಕೌಂಡನ ಮನಸ್ಸಿಗೆ ಇದು ಅಷ್ಟಾಗಿ ತಾಕಲಿಲ್ಲ. 1943ರಲ್ಲಿ ಈತ ಮುನಾಲಿಯನ್ನು ಬಿಟ್ಟು ಲುಬ್ವಕ್ಕೆ ಹಿಂದಿರುಗಿ ಅಧ್ಯಾಪಕನಾದ. ಮೂರು ವರ್ಷಕಾಲ ಈತ ಅಧ್ಯಾಪಕವೃತ್ತಿಗೇ ಅಂಟಿಕೊಂಡಿದ್ದರೂ ಆ ಜೀವನ ಇವನಿಗೆ ಬೇಸರ ಬರಿಸುತ್ತಿತ್ತು. 1947ರಲ್ಲಿ ಈತ ಅಧ್ಯಾಪಕ ಹುದ್ದೆಯನ್ನು ಬಿಟ್ಟ. ತನಗೆ ಪ್ರಿಯವಾದ ಕೆಲಸದ ಅನ್ವೇಷಣೆಯಲ್ಲಿ ಟಾಂಗನ್ಯೀಕ ಮತ್ತು ದಕ್ಷಿಣ ರೊಡೀಷಿಯಗಳಿಗೆ ಹೋಗಿ ಬಂದ. ಕೊನೆಗೆ ಮುಫುಲಿರದಲ್ಲಿ ಮತ್ತೆ ಶಿಕ್ಷಕನಾದ. ಈ ವೇಳೆಗೆ ಬೆಟಿ ಬಂಡಳೊಂದಿಗೆ ಇವನ ವಿವಾಹವಾಗಿತ್ತು. ಅವಳೂ ಶಿಕ್ಷಕಿಯಾದಳು. ತಾಮ್ರಗಣಿ ಪ್ರದೇಶದ ಆ ಸ್ಥಳದಲ್ಲಿ ಕೌಂಡ ಬಹುಕಾಲ ಇರಲಿಲ್ಲ. 1949ರಲ್ಲಿ ಈತ ಲುಬ್ವಕ್ಕೆ ಹಿಂದಿರುಗಿ ಬೇಸಾಯ ಕೈಕೊಂಡ. ಇವನ ತಲೆಯಲ್ಲಿ ರಾಜಕೀಯ ವಿಚಾರಗಳೇ ತುಂಬಿಕೊಂಡಿದ್ದುವು. ಆಫ್ರಿಕದ ರಾಷ್ಟ್ರೀಯ ಕಾಂಗ್ರೆಸಿನ ಕೇಂದ್ರಾಲಯದ ಅನುಮತಿ ಪಡೆದು ಚಿನ್ಸಾಲಿ ಜಿಲ್ಲೆಯಲ್ಲಿ ಈತ ಅದರ ಶಾಖೆಯೊಂದನ್ನು ತೆರೆದ. 1950ರಲ್ಲಿ ಕಾಂಗ್ರೆಸಿನ ಚೆನ್ಸಾಲಿ ಶಾಖೆಯ ಕಾರ್ಯದರ್ಶಿಯನ್ನಾಗಿ ಈತನನ್ನು ಆಯ್ಕೆ ಮಾಡಲಾಯಿತು. ಈತ ಸೈಕಲ್ ಮೇಲೆ ಊರಿಂದೂರಿಗೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದ. ಚೆನ್ಸಾಲಿ ಮುಂದೆ ಬಿರುಸಿನ ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಪರಿಣಮಿಸಿತು.

	ಕಾಂಗ್ರೆಸಿನೊಡನೆ ಸಂಪರ್ಕ ಏರ್ಪಡಿಸಿಕೊಂಡಂದಿನಿಂದಲೇ ಕೌಂಡನ ರಾಜಕೀಯ ಜೀವನ ಆರಂಭವಾಯಿತು. ಪಕ್ಷದ ಅಧ್ಯಕ್ಷನಾಗಿದ್ದ ಹ್ಯಾರಿ ಎನ್‍ಕುಂಬಲ ಮತ್ತು ಈತ ವಕ್ಷಕಾಗಿ ಅವಿಶ್ರಾಂತವಾಗಿ ದುಡಿದರು. ವಿದ್ಯಾವಂತರಾದ ಯುವಕರು ಈ ಸಂಸ್ಥೆಯನ್ನು ಬೆಂಬಲಿಸತೊಡಗಿದರು. ಇದರ ನೇತೃತ್ವದಲ್ಲಿ 1953ರಲ್ಲಿ ಸಂತಾಪ ದಿನವನ್ನು ಆಚರಿಸಲಾಯಿತು. ಸರ್ಕಾರಿ ಕಾರ್ಯಾಲಯಗಳಲ್ಲಿ ಗುಮಾಸ್ತರಾಗಿದ್ದ ಅನೇಕರು ಅಂದು ಕೆಲಸವನ್ನು ನಿಲ್ಲಿ ಅದಕ್ಕಾಗಿ ಶಿಕ್ಷೆಗೆ ಗುರಿಯಾದರು. ರಾಷ್ಟ್ರವಿಮೋಚನೆಯ ಚಳವಳಿ ಬಿರುಸಾಯಿತು. ಕಾಂಗ್ರೆಸಿನ ಸದಸ್ಯರ ಸಂಖ್ಯೆ ಏರತೊಡಗಿತು. ಈ ಎಲ್ಲ ಚಟುವಟಿಕೆಗಳ ಹಿಂದೆ ಕೌಂಡನ ಪ್ರೇರಣೆ ಇದ್ದೇ ಇತ್ತು. 

	1954 ಮತ್ತು 1955ರ ಅವಧಿಯಲ್ಲಿ ತನ್ನ ಅನುಯಾಯಿಗಳ ಉತ್ಸಾಹವನ್ನು ಕಾಪಾಡಿಕೊಂಡು ಬರುವಲ್ಲಿ ಇವನಿಗೆ ಅನೇಕ ಕಷ್ಟಗಳು ಎದುರಾದುವು. ಆಗ ವರ್ಣಭೇದದಂಥ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವತ್ತ ಜನ ಗಮನ ಕೊಡುವಂತೆ ಕೌಂಡ ಪ್ರಯತ್ನಿಸಿದ. ಕೌಂಡನಿಗೆ ಸ್ವತಃ ಈ ದುಃಸ್ಥಿತಿಯ ಅರಿವಾಗಿತ್ತು. ಪುಸ್ತಕವೊಂದನ್ನು ಕೊಳ್ಳಲು ಅಂಗಡಿಗೆ ಹೋದಾಗ ಮತ್ತು ಸ್ಯಾಂಡ್‍ವಿಚ್‍ಗಳನ್ನು ಕೊಳ್ಳಲು ಕೆಫೆಯೊಂದಕ್ಕೆ ಹೋದಾಗ ಬಿಳಿಯರಿಗಾಗಿ ಮೀಸಲಾಗಿದ್ದ ಬಾಗಿಲಿನ ಮೂಲಕ ಪ್ರವೇಶಿಸಿದನೆಂಬ ಕಾರಣಕ್ಕಾಗಿ ಇವನನ್ನು ಹೊಡೆದು ಹೊರದೂಡಲಾಗಿತ್ತು. ಹೀಗಾಗಿ ಅನೇಕ ಕಡೆಗಳಲ್ಲಿ ಈತ ಬಹಿಷ್ಕಾರ ಕಾರ್ಯಕ್ರಮಗಳನ್ನು ಏರ್ಪಡಿಸಿದ. ಈ ಕಾರ್ಯಕ್ರಮಗಳು ಗಮನಾರ್ಹ ಯಶಸ್ಸನ್ನು ಗಳಿಸಿದ್ದು ಐರೋಪ್ಯರ ಕಣ್ಣುಗಳನ್ನು ಕೆಂಪಗಾಗಿಸಿತು. ನಿಷೇಧಾತ್ಮಕ ಸಾಹಿತ್ಯವನ್ನು ಹೊಂದಿದ್ದರೆಂಬ ಆರೋಪವನ್ನು ಹೊರಿಸಿ ಕೌಂಡನನ್ನೂ ಎನ್ಕುಂಬುಲನನ್ನೂ ಸರ್ಕಾರ ಸೆರೆಮನೆಗೆ ದೂಡಿತು. ಎರಡು ತಿಂಗಳ ಸೆರೆಮನೆಯ ಶಿಕ್ಷೆ ಕೌಂಡನ ನಿರ್ಧಾರವನ್ನು ಮತ್ತಷ್ಟು ದೃಢಪಡಿಸಿತು. ಬಂಧನದ ಜೀವನ ಇವನ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿತ್ತು. ಕೌಂಡನ ಜೀವನ ಸರಳವಾಯಿತು. ಕುಡಿತ, ಧೂಮಪಾನಗಳನ್ನು ಸಂಪೂರ್ಣ ವರ್ಜಿಸಿದ್ದ ಕೌಂಡ ಆಗ ಮಾಂಸಾಹಾರವನ್ನೂ ತ್ಯಜಿಸಿದ.

	ಪಕ್ಷದಲ್ಲಿ ತೀವ್ರಗಾಮಿಗಳು ಮತ್ತು ಮಂದಗಾಮಿಗಳ ಗುಂಪುಗಳು ಹುಟ್ಟಿಕೊಂಡುವು. ಕೌಂಡನ ನೇತೃತ್ವದಲ್ಲಿ ಕ್ರಾಂತಿಕಾರಿಗಳೆಲ್ಲ ಒಂದುಗೂಡಿ 1958ರಲ್ಲಿ eóÁಂಬಿಯ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಸ್ಥೆಯನ್ನು ಸ್ಥಾಪಿಸಿದರು. ಕೌಂಡ ಇದರ ಪ್ರಥಮ ಅಧ್ಯಕ್ಷನಾದ.

	ಸರ್ಕಾರ eóÁಂಬಿಯ ಕಾಂಗ್ರೆಸನ್ನು ಬಹಿಷ್ಕರಿಸಿತು. ಅದರ ನಾಯಕರನ್ನು ದೂರದ ಸೆರೆಮನೆಗಳಿಗೆ ದೂಡಿತು. ಎರಡನೆಯ ಬಾರಿ ಕೌಂಡ ಜೈಲುವಾಸವನ್ನು ಅನುಭವಿಸಿದ. ಅಲ್ಲಿ ಇವನ ಆರೋಗ್ಯ ಕೆಟ್ಟಿತು. ಕಾಂಗ್ರೆಸಿನೊಂದಿಗೆ ಕೌಂಡನ ಹೆಸರೂ ಇಲ್ಲವಾಗುತ್ತದೆ. ಆದರೆ, ಸರ್ಕಾರದ ಕಣ್ಣು ತಪ್ಪಿಸಿದ್ದ ನಾಯಕರು ಒಂದೆಡೆ ಸೇರಿ, 6 ತಿಂಗಳೊಳಗೆ ಆಫ್ರಿಕನ್ ರಾಷ್ಟ್ರೀಯ ಸ್ವಾತಂತ್ರ್ಯಪಕ್ಷವನ್ನು ಸ್ಥಾಪಿಸಿದರು. 1959ರ ಕೊನೆಯ ಹೊತ್ತಿಗೆ ಸಣ್ಣ ಪಕ್ಷಗಳೆಲ್ಲ ಇದರಲ್ಲಿ ಒಂದಾದುವು. ಪಕ್ಷದ ಹೆಸರನ್ನು ಸಂಯುಕ್ತ ರಾಷ್ಟ್ರೀಯ ಸ್ವಾತಂತ್ರ್ಯ ಪಕ್ಷ ಎಂದು ಬದಲಿಸಲಾಯಿತು. 9 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಮೇಲೆ ಕೌಂಡ ಈ ಹೊಸ ಪಕ್ಷದ ಅಧ್ಯಕ್ಷನಾಗಿ ಆಯ್ಕೆಹೊಂದಿದ (1960).

	ಆ ವರ್ಷದ ಅಕ್ಟೋಬರ್ ಒಳಗಾಗಿ ಸ್ವಾತಂತ್ರ್ಯವನ್ನು ಸಾಧಿಸಬೇಕೆಂಬ ಘೋಷಣೆ ನಾಡಿನಾದ್ಯಂತ ಮೊಳಗಿತ್ತು. ಇಷ್ಟು ಅಲ್ಪ ಅವಧಿಯಲ್ಲಿ ಸ್ವಾತಂತ್ರ್ಯವನ್ನು ಸಾಧಿಸಲಾದೀತೆಂಬ ನಂಬಿಕೆ ನಾಯಕರಿಗೆ ಇರಲಿಲ್ಲ. ನಾಯಕತ್ವಕ್ಕೆ ಅದು ಅಗ್ನಿಪರೀಕ್ಷೆಯ ಕಾಲವಾಗಿತ್ತು.

	ಈ ಮಧ್ಯೆ ಏಪ್ರಿಲ್ 13ರಂದು ನ್ಯೂಯಾರ್ಕ್‍ನಲ್ಲಿ ನಡೆಯಲಿದ್ದ ಆಫ್ರಿಕ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸುವಂತೆ ಕೌಂಡನಿಗೆ ಆಹ್ವಾನ ಬಂತು. ಹಿಂದಿನ ದಿನವೇ ದಕ್ಷಿಣ ಆಫ್ರಿಕದ ಬಿಳಿಯ ನಾಯಕ ವೆರ್‍ವೋರ್ಡನನ್ನು ಕೊಲ್ಲುವ ಯತ್ನ ನಡೆದಿತ್ತು. ರಾಜಕೀಯ ಬದಲಾವಣೆಯನ್ನುಂಟು ಮಾಡಲು ಕೊಲೆಯ ಮಾರ್ಗ ಸರಿಯಲ್ಲ; ಅಹಿಂಸಾತ್ಮಕ ಮಾರ್ಗವೊಂದೇ ಅನುಸರಣೀಯವಾದ ಮಾರ್ಗ ಎಂದು ಕೌಂಡ ಆ ಸಭೆಯಲ್ಲಿ ಘೋಷಿಸಿದ.

	ಲಂಡನಿನಲ್ಲಿ ವಸಾಹತು ಸಚಿವಾಲಯದ ಮುಖ್ಯರೊಡನೆ ಮಾತುಕತೆ ನಡೆಸಿ ಅನಂತರ ಮೇ 27ರಂದು ಕೌಂಡ eóÁಂಬಿಯ ಹಿಂದಿರುಗಬೇಕಾಗಿತ್ತು. ಈ ಮಧ್ಯೆ ದುರದೃಷ್ಟವಶಾತ್ ಜನರ ಗುಂಪೊಂದು ಲಿಲಿಯನ್ ಬರ್ಟನ್ ಎಂಬುವಳನ್ನು ಹಿಂಸಿಸಿ, ಪೆಟ್ರೋಲ್ ಸುರಿದು ಬೆಂಕಿಯಿಟ್ಟಿತು. ಆಕೆ ಆಸ್ಪತ್ರೆಯಲ್ಲಿ ತೀರಿಕೊಂಡಳು. ಈ ಕಾರಣದಿಂದಾಗಿ ಸರ್ಕಾರ ಕೌಂಡನ ಪಕ್ಷವನ್ನು ಬಹಿಷ್ಕರಿಸಿತು. ಮಾರ್ಗಮಧ್ಯದಲ್ಲಿಯೇ ಕೌಂಡನನ್ನು ಬಂಧಿಸಿ ಗಡಿಪಾರು ಮಾಡಲಾಯಿತು. ಜೂನ್ 16ರಂದು ಇದ್ದಕ್ಕಿದ್ದಂತೆಯೇ ಈತ eóÁಂಬಿಯದಲ್ಲಿ ಕಾಣಿಸಿಕೊಂಡ. 

	ಜನತೆ ಅಕ್ಟೋಬರ್ ಒಳಗಾಗಿ ಸ್ವಾತಂತ್ರ್ಯ ಬೇಕೆಂದು ಖಾತರಿಸುತ್ತಿದ್ದರೆ ಸರ್ಕಾರ ಮಿಲಿಟರಿ ಬಲವನ್ನು ಹೆಚ್ಚಿಸಿಕೊಳ್ಳತೊಡಗಿತ್ತು. ಸಂಧಾನಗಳು ಫಲಿಸಲಿಲ್ಲ. ನಾಡಿನಲ್ಲೆಲ್ಲ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು. ಕೌಂಡ ನಾಡಿನಾದ್ಯಂತ ಸಂಚರಿಸಿ ಶಾಂತಿ ಮತ್ತು ಅಹಿಂಸೆಯಿಂದರಿಬೇಕೆಂದು ಜನಕ್ಕೆ ಮನವಿ ಮಾಡಿಕೊಂಡ.

	ಮುಂದೆ ಅಸಹಕಾರ ಸತ್ಯಾಗ್ರಹ ಪ್ರಾರಂಭವಾಯಿತು. ಕೌಂಡನ ಪಕ್ಷದ ಸಾವಿರಾರು ಮಂದಿ ಸದಸ್ಯರು ಬಿಳಿಯರ ಸರ್ಕಾರ ನೀಡಿದ್ದ ಗುರುತು ಚೀಟಿಗಳನ್ನು ಸುಟ್ಟುಹಾಕಿದರು. ಇದಕ್ಕಾಗಿ ಅವರಿಗೆ ಸೆರೆಮನೆಯ ಶಿಕ್ಷೆಯನ್ನೂ ದಂಡವನ್ನೂ ವಿಧಿಸಲಾಯಿತು. ಕೌಂಡ ಲಂಡನ್ನಿನಲ್ಲಿ ಪತ್ರಕರ್ತರ ಎದುರಿನಲ್ಲೇ ತನ್ನ ಗುರುತು ಚೀಟಿಯನ್ನು ಸುಟ್ಟುಹಾಕಿದ. ಆದರೆ ಬ್ರಿಟಿಷ್ ಸರ್ಕಾರಕ್ಕೆ ಅವನನ್ನು ಬಂಧಿಸಲು ಧೈರ್ಯವಾಗಲಿಲ್ಲ. ಸೈನಿಕ ಕಾರ್ಯಾಚರಣೆಯ ಬಗ್ಗೆ ವಿಚಾರಣೆ ನಡೆಸುವಂತೆ ಕೌಂಡ ಒತ್ತಾಯಪಡಿಸಿದ. ಆದರೆ ಸರ್ಕಾರ ಈ ಸೂಚನೆಯನ್ನು ತಿರಸ್ಕರಿಸಿತು. ಕೌಂಡನ ಪಕ್ಷ ತನ್ನದೇ ಆದ ವರದಿಯನ್ನು ಹೊರಡಿಸಿ, ರಕ್ಷಣಾಪಡೆಗಳು ನಡೆಸಿದ್ದ ಲೂಟಿ ಮತ್ತು ಅತ್ಯಾಚಾರಗಳ ವಿವರಗಳನ್ನು ಬಯಲಿಗೆಳೆಯಿತು. ಸರ್ಕಾರವೂ ತನ್ನ ದಾಖಲೆಗಳನ್ನು ಬಿಡುಗಡೆ ಮಾಡಿತು. ಬ್ರಿಟಿಷ್ ಸರ್ಕಾರ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡುವ ನಿರ್ಧಾರವನ್ನು ಪ್ರಕಟಿಸಿತು. ಇದೊಂದು ಮಹತ್ತ್ವಪೂರ್ಣ ಸಾಧನೆಯೇ ಆಗಿತ್ತು. ಏಕೆಂದರೆ ಕೆಲವೇ ವಾರಗಳ ಹಿಂದೆ ಇದ್ದ ಸರ್ಕಾರ ಇದೇ ಸಂವಿಧಾನವನ್ನು ಅಂತಿಮ ಪರಿಹಾರವೆಂದು ಘೋಷಿಸಿತ್ತು. ದೀರ್ಘ ಸಂಧಾನಗಳು ನಡೆದುವು. ಆದರೆ ಯಾವುದೂ ಫಲಿಸಲಿಲ್ಲ.

	1962ರಲ್ಲಿ ವಿಶ್ವಸಂಸ್ಥೆಯ ವಸಾಹತು ಸಮಿತಿಯಲ್ಲಿ ಮತ್ತು ಅಮೆರಿಕದ ವಿವಿಧ ಸಭೆಗಳಲ್ಲಿ ಭಾಗವಹಿಸಿ, eóÁಂಬಿಯದ ಸಮಸ್ಯೆಗೆ ಸ್ವಾತಂತ್ರ್ಯವೊಂದೇ ಪರಿಹಾರವೆಂಬುದನ್ನು ಕೌಂಡ ಸ್ಪಷ್ಟಪಡಿಸಿದ. ಕೊನೆಗೆ ಬ್ರಿಟಿಷ್ ಸರ್ಕಾರ eóÁಂಬಿಯಕ್ಕೆ ಸ್ವಯಮಾಡಳಿತ ಕೊಡಲೊಪ್ಪಿ 1964ರ ಜನವರಿಯಲ್ಲಿ ನಡೆಸಿದ ಚುನಾವಣೆಗಳಲ್ಲಿ ಕೌಂಡನ ಪಕ್ಷಕ್ಕೆ ಬಹುಮತ ಲಭ್ಯವಾಗಿ ಈತ ಅದರ ಪ್ರಧಾನಿಯಾದ. 1964ರ ಅಕ್ಟೋಬರಿನಲ್ಲಿ ಅದು ಸ್ವತಂತ್ರ ಗಣರಾಜ್ಯವಾಗಿ eóÁಂಬಿಯ ಎಂಬ ಹೆಸರು ತಳೆಯಿತು. ಕೌಂಡ ಅದರ ಪ್ರಥಮ ಅಧ್ಯಕ್ಷನಾದ. 										(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ